Posts

Showing posts from July 25, 2021

ಮಶಾಲು ಉರಿಯುತಲಿದೆ...

Image
ಬಿರುಗಾಳಿ, ಮಳೆ-ಚಳಿಗೆ ನಂದದೆ ಅಂತರಂಗದೊಳಗಿನ ಮಶಾಲು ಉರಿಯುತ್ತಲೇ ಇದೆ! ಸುತ್ತಲೆಲ್ಲ ಅದೆಷ್ಟು ಕರಿ ನೆರಳುಗಳು ಸುಳಿದರೂ, ಅವು ಮೈ ಸೋಕದಂತೆ ಹೆದರಿಸುತ್ತಾ ಉರಿಯುತಿದೆ; ಕಣ್ಣು ಕೋರೈಸುವ ಮಿನುಗುವ ಬದುಕುಗಳ ಎದೆ ನಡುಗಿಸುವ ಮಂದ ಬೆಳಕನು ಚೆಲ್ಲುತ ಉರಿಯುತಿದೆ; ತನ್ನೊಳಗೇ ಮುಳುಗಿರುವವರ ಕಣ್ಣು ತೆರೆಸಲು ಸ್ವಾರ್ಥದ ಪರದೆಯನೇ ನುಂಗುತ್ತಾ ಉರಿಯುತಿದೆ... ತಣ್ಣಗಿನ ಎದೆಯವರ ಮೇಲೆ ಜ್ವಾಲೆಯು ಕೆನ್ನಾಲಗೆಯ ಬರೆಯನೆಳೆದೆಳೆದು ಉರಿಯುತಿದೆ; ಅಂತರಾಳದೊಳಗೆ ಒಂದಷ್ಟು ಶುದ್ಧತೆಯನುಳಿಸುವ, ಅದರ ದನಿಗೆ ಬೆಳಕಾಗಲು ಮಶಾಲು ಉರಿಯುತ್ತಲೇ ಇದೆ... ಗುಡ್ಡೆ ಹಾಕುತ್ತಲಿರುತ್ತದೆ ಎಲ್ಲರೊಳಗಿನ ಮಶಾಲು  ನಮ್ಮ ಕೈಲಾದ ಅನ್ಯಾಯ ಅಪಮಾನಗಳನು ಸದ್ದಿಲ್ಲದೆ... ಎಗ್ಗಿಲ್ಲದೆ ಆಗಾಗ ಅವುಗಳನು ಮನದ ಮುಂದಿರಿಸಿ  ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ; ಒಂಟಿಯಾದಾಗ ಒಂದೊಂದನೇ ಯೋಚನೆಗಳಾಗಿ ಕಣ್ಣು ಮುಚ್ಚಿದಾಗ ದಾರುಣ ಕನುಸುಗಳಾಗಿ ಮದದ ಹೆದೆಯೇರಿಸುವಾಗ ಕರ್ಮಗಳ ಪ್ರತಿಫಲದ ಅಂಜಿಕೆಯಾಗಿ ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ ಎಗ್ಗಿಲ್ಲದೆ ಆಗಾಗ ಅನ್ಯಾಯ ಅಪಮಾನಗಳನು  ಮನದ ಮುಂದಿರಿಸಿ.... ಈ ಮಾನವೀಯತೆಯ ಮಶಾಲು ಉರಿದಷ್ಟು ದಿನ  ಮಾನವನು ಉಳಿದಾನು ಮಾನವನಾಗಿ, ಇದನರಿತ ಅಂತರಾತ್ಮದ ಮಶಾಲು ಉರಿಯುತ್ತಲೇ ಇದೆ; ಎಂತಹ ಬಿರುಗಾಳಿ, ಮಳೆ-ಚಳಿಗೂ ಭಯ ಬೀಳದೆ... -ಪಲ್ಲವಿ ಕಬ್ಬಿನಹಿತ್ಲು