ನೀನೊಂದು ಮಾತು ಹೇಳಿದ್ದಿದ್ರೆ?!

 





ತಾಯಿಗೆ ಮಗುವಿನ ಮನಸ್ಸನ್ನು ಅರಿಯುವ ಶಕ್ತಿಯನ್ನು ಪ್ರಕೃತಿಯೇ ಕೊಡುತ್ತಂತೆ.

ಆದರೆ ಮಗಳೇ, ನಿನ್ನ ತಂದೆಯಾಗಿಯೂ ತಾಯಿಯ ಪ್ರೀತಿ, ಅಕ್ಕರೆಯನ್ನು ಕೊಡುವ

ಸಾಮರ್ಥ್ಯವನ್ನು ಕಲಿಸಿದ್ದು ನಿನ್ನ ಅಮ್ಮನಿಲ್ಲದ ‘ಜೀವನ’...

ನಿನ್ನ ಅಮ್ಮ ಅಂದು ನಿನಗೆ ಜನ್ಮ ಕೊಟ್ಟು, ತನ್ನ ಕೊನೆಯುಸಿರನೆಳೆದಳು. ಅಂದಿನಿಂದ

ಕಣ್ಣರೆಪ್ಪೆ ಕಣ್ಣನ್ನು ಕಾದಂತೆ, ನಿನ್ನನ್ನು ಜೋಪಾನ ಮಾಡಿದೆ. ನನಗಿದ್ದ ಒಂದೇ ಒಂದು

ಸಂಪತ್ತು ನೀನು ಎಂದು, ನಿನಗೆ ಐಶ್ವರ್ಯಾ ಎಂದು ಹೆಸರಿಟ್ಟೆ. ನೀನು ಕೇಳಿದ್ದಕ್ಕೆಲ್ಲ ಒಲ್ಲೆ

ಎನ್ನದೆ, ತಂದುಕೊಟ್ಟೆ. ಹಗಲು-ರಾತ್ರಿ ದುಡಿದು ನಿನಗೆ ಪ್ರೀತಿಯ ಧಾರೆ ಎರೆದೆ.

ಅಂದು ಹೈಸ್ಕೂಲಿನಲ್ಲಿ ನೀನು ಗೆಳತಿಯರೊಡನೆ ಶಾಲೆ ತಪ್ಪಿಸಿ ಸಿನೆಮಾ ಹೋಗಿದ್ದು!

ಅಂದು ಅಲ್ಲಿದ್ದ ಕೆಲವರು ನಿಮ್ಮನ್ನು ನೋಡಿ ನನ್ನಲ್ಲಿ, ಶಿಕ್ಷಕರಲ್ಲಿ ದೂರು ಕೊಟ್ಟಿದ್ದು,

ನಿನಗೆ ನೆನಪಿರಬಹುದು. ಆಗ ಶಿಕ್ಷಕರು ನಿನ್ನನ್ನು ಗದರುತ್ತಿದ್ದಾಗ ಎಲ್ಲ ತಪ್ಪನ್ನು ನನ್ನ

ಮೇಲೆ ಹೊತ್ತು ನಿನ್ನನ್ನು ಬಚಾವ್ ಮಾಡಿದ್ದೆ, ಅಲ್ವಾ?!



ನಿನ್ನ ಮೇಲೆ ನೂರಾರು ಕನಸುಗಳನ್ನು ಇಟ್ಕೊಂಡಿದ್ದೆ. ಅದರಲ್ಲೂ ಎಸ್ಸೆಸೆಲ್ಸಿಲಿ, ಒಳ್ಳೆ

ಮಾರ್ಕ್ಸ್ ತೆಗಿತಾಳೆ ಅಂದ್ಕೊಂಡ ಮಹದಾಶೆ ಪೂರೈಸ್ಲೇ ಇಲ್ಲ. ಒಂದು ವರ್ಷ ಮನೇಲೇ

ಕೂತ್ಕೊಂಡು ಬಿಟ್ಯಲ್ಲೇ ನೀನು! ಆದ್ರೂ ಏನೂ ಹೇಳ್ಲಿಲ್ಲ ನಾನು, ಯಾಕಂದ್ರೆ, ಹೇಳಿದ್ನಲ್ಲ

ಅಮ್ಮನ ಹೃದಯ ನನ್ನಲ್ಲಿತ್ತು ಅಂತ.

ಮಗಳೇ, ಪುಟ್ಟ ಮಕ್ಕಳ ಮನಸ್ಸು ಮುಗ್ಧ ಅನ್ನೋದನ್ನ ಹಿರಿಯರು ಹಾಗೆ ಹೇಳ್ಲಿಲ್ಲ.

ಬೆಳೆದ ಹಾಗೆ ಆ ತುಂಟಾಟ, ನಿರ್ಮಲತೆ ಮಾಯವಾಗುತ್ತೆ. ನಿನ್ನಲ್ಲೂ ಆ ಬದಲಾವಣೆ

ಯಾವಾಗಾಯ್ತೋ ಗೊತ್ತಿಲ್ಲ... ನೀನು ಎಷ್ಟು ಬೆಳೆದ್ರೂ ನನಗೆ ನೀನು ಮಗುವಿನ ಹಾಗೇ

ಇದ್ದೆ. ನನ್ನ ಗಮನ ತಪ್ಪಿಸಿ ಯಾವಾಗ ನೀನು ತಪ್ಪು ಹಾದಿ ಹಿಡ್ದೆ ಅನ್ನೋದು ನಂಗೆ

ಗೊತ್ತೇ ಆಗ್ಲಿಲ್ಲ. ಒಳ್ಳೆ ಅಪ್ಪನಾಗಿದೀನಿ, ಆಗ್ಬೇಕು ಅನ್ನೋ ಹಂಬಲದಲ್ಲಿ ನೀನೇನೇ

ಹೇಳು, ಎಲ್ಲದಕ್ಕೂ ಸೈ ಅಂದ್ಬಿಡ್ತಿದ್ದೆ ನಾನು!


ಮದುವೆ ವಯಸ್ಸಿಗೆ ಬಂದಾಗ ನಿಂಗೆ ಇಷ್ಟವಾದ ಹುಡುಗನ್ನ ಆರಿಸ್ಕೋ ಅಂತ ಒಂದ್ಹತ್ತು

ಫೊಟೋಗಳನ್ನು ಕೊಟ್ಟಿದ್ದೆ. ಎಲ್ರೂ ಶ್ರೀಮಂತರೇ; ಆರ್ಥಿಕವಾಗಿಯೂ ಹೌದು,

ಗುಣಗಳಲ್ಲಿಯೂ ಸಹ. ನೀನು ರವಿಯನ್ನ ಜೀವನ ಸಂಗಾತಿಯನ್ನಾಗಿ ಆರಿಸ್ಕೊಂಡೆ. 

ಮದುವೆಯ ಮೊದಲಿನ ಎಲ್ಲಾ  ಶಾಸ್ತ್ರಗಳಲ್ಲೂ ಸಂತೋಷವಾಗಿಯೇ ಭಾಗವಹಿಸಿದ್ದೆ.

ಆದ್ರೆ ಮದುವೆ ಇನ್ನೇನು ಆಗೇ ಬಿಡ್ತು ಅನ್ನೋ ಹೊತ್ತಿಗೆ ಯಾವುದೋ ಹುಡುಗನ ಜೊತೆ

ಓಡಿ ಹೋದೆ. ಸುಂದರವಾಗಿ ಅಲಂಕಾರ ಮಾಡಿ ಹಸೆಮಣೆ ಏರ್ಬೇಕಾಗಿದ್ದ ನೀನು, ರವಿ

ಜೊತೆ, ಅವನ ಆಸೆ, ಕನಸುಗಳ ಜೊತೆ; ಅವನ ಬದುಕಿನ ಜೊತೆ ಚೆಲ್ಲಾಟವಾಡ್ದೆ...

ನೀನು ಅದನ್ನ ನಿನ್ನ ದಿಟ್ಟತನ, ಪ್ರೀತಿಗಾಗಿ ಮಾಡಿದ ತ್ಯಾಗ, ಸಮಾಜದ ವಿರುದ್ಧ ಹೆಜ್ಜೆ

ಇಡೋ ಧೈರ್ಯ ಅಂದ್ಕೊಂಡೆ. ಆದ್ರೆ, ಒಬ್ಬ ತಂದೆಯಾಗಿ ನಾನು ಏನು ಹೇಳ್ತೀನಂದ್ರೆ,

ಅದು ನಿನ್ನ ಹೇಡಿತನ. ನೀನು ಒಂದೇ ಒಂದು ಸಲ ನನ್ನಲ್ಲಿ ನಿನ್ನ ಆಸೆ ಬಗ್ಗೆ ಹೇಳಿದ್ದಿದ್ರೆ,

ಇವತ್ತು ನಿನ್ನ ಮಗುವಿಗೆ ನನ್ನ ಪ್ರೀತಿ ಸಿಗ್ತಾ ಇತ್ತು . ನೀನು ತೆಗೆದುಕೊಂಡ ಒಂದು ತಪ್ಪು

ಹೆಜ್ಜೆ ಇಂದಿಗೂ ನನ್ನನ್ನು ಸಮಾಜ ಒಬ್ಬ ನೀಚ ತಂದೆಯಾಗಿ ಕಾಣೋ ಹಾಗೆ ಮಾಡ್ತು.

ಇದನ್ನ ಕೇಳ್ಕೊಂಡು ಇಷ್ಟು ದಿನ ಹೇಗೋ ಬದುಕಿದೆ. ಆದ್ರೆ ಇನ್ನು ಸಹಿಸೋ ಶಕ್ತಿ

ನನ್ನಲ್ಲಿಲ್ಲ ಅನ್ಸುತ್ತೆ. ಇದು ನನ್ನ ಕೊನೆ ಮಾತು, ಪತ್ರ, ಭಾವನೆ. ಹಾಗಂತ ನನ್ನನ್ನು ನಿನ್ನ

ಹಾಗೆ ‘ಹೇಡಿ’ ಅಂದ್ಕೊಳ್ಬೇಡ. ನಾನು ನನ್ನನ್ನು ಕೊನೆಗೊಳಿಸ್ತಾ ಇಲ್ಲ, ನನ್ನೊಳಗೆ

ಅವಿತಿರೋ ಹತ್ತು- ಹನ್ನೆರಡು ರೋಗಗಳು ನನ್ನನ್ನು ಮುಗಿಸೋದ್ರಲ್ಲಿದೆ...

ಒಂದು ವಯಸ್ಸಿನ ನಂತರ ಪೋಷಕರು ಮಕ್ಕಳ ಸ್ನೇಹಿತರಾಗ್ಬೇಕಂತೆ. ಒಬ್ಬ ತಂದೆಯಾಗಿ

ನನ್ನಿಂದ ಸಾಧ್ಯವಾಗಲಿಲ್ಲ. ಆದ್ರೆ ಒಳ್ಳೆಯ ಮಗಳಾಗಿ ನೀನು ಈ ಎಲ್ಲ ಘಟನೆಗಳನ್ನು

ತಪ್ಪಿಸ್ಬಹುದಿತ್ತು. ನಾನು ನಿನ್ನ ವಿಚಾರಕ್ಕೆ ಒಪ್ತಿದ್ದೆ, ತೀರ್ಮಾನವನ್ನು ಗೌರವಿಸ್ತಿದ್ದೆ,

ನೀನೊಂದು ಮಾತು ಹೇಳಿದ್ದಿದ್ರೆ...

ನೀನೊಂದು ಮಾತು ಹೇಳಿದ್ದಿದ್ರೆ, ನಾನು ಒಂದ್ಹತ್ತು ವರ್ಷ ಜಾಸ್ತಿ ಉಳಿತಿದ್ನೇನೋ;

ನನ್ಮಗಳೇ, ನನ್ನ ಐಶ್ವರ್ಯಾ...


-ಪಲ್ಲವಿ ಕಬ್ಬಿನಹಿತ್ಲು


WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

Comments

  1. 🤩Sprb..... ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಚಿತ್ರಣ😣

    ReplyDelete
  2. ಓದ್ತಾ ಓದ್ತಾ ಬೇಜಾರಾಯ್ತು ....😔 ಇಂದಿನ ಸಮಾಜದಲ್ಲಿ ಆಗ್ತಿರೋದು ಇದೇ....

    ReplyDelete
  3. ವಿಷಾದನೀಯ...ಆದರೂ ಸತ್ಯ!
    ಉತ್ತಮ ಬರವಣಿಗೆ👌

    ReplyDelete
  4. Appana preethi adbhutha kaviya chinthane athyadhbutha......

    ReplyDelete

Post a Comment

Popular posts from this blog

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!

ಮುಖವಾಡಗಳು