Posts

ಕಿಸೆ ತುಂಬುವ ಕನಸುಗಳು

Image
ನನ್ನ ಖಾಲಿ ಕಿಸೆಗಳಲ್ಲಿ ಆಗಾಗ ತುಂಬುತ್ತೇನೆ ಒಂದಷ್ಟು ನಾಣ್ಯಗಳ ಜೊತೆಗೆ, ಬಣ್ಣದ-ಬೆಳಕಿನ ಬದುಕಿನ ಕನಸುಗಳನು... ಅವು ಹರಿದ ಕಿಸೆಯಲಿರುವ ಸೆರೆಯಿಂದ ಹನಿ-ಹನಿಯಾಗಿ ಸೋರಿಕೊಳ್ಳುತ್ತವೆ, ಚೂರು-ಪಾರು ಗಾಳಿಯಲಿ ಕರಗಿಬಿಡುತ್ತವೆ; ನಾಣ್ಯಗಳ ತೂಕದಡಿಯಲಿ ಹೊಸಕಿ ಹೋಗುತ್ತವೆ!! ಅಲ್ಲದಿದ್ದರೇನು?! ನೋಟು ತುಂಬುವ ಕಿಸೆಯಾದರೆ, ಸೋರುವ ಸೆರೆಯಿಲ್ಲ; ತುಳಿದುಬಿಡುವ ಭಾರವಿಲ್ಲ!! ಬದಲಾಗಿ ಹಗುರ ನೋಟುಗಳು ರೆಕ್ಕೆಗಳಾಗುವವು; ನಾಣ್ಯಗಳ ಹಾಗೆ ಕಡಿವಾಣ ಹಾಕಲಾರವು, ಎತ್ತರೆತ್ತರಕ್ಕೆ ಹಾರುವುದಕ್ಕೆ; ಏರುವುದಕ್ಕೆ!! ಕಿಸೆಯಲಿರುವುದು ಬರೀ ನಾಣ್ಯಗಳೆಂದು ಅತ್ತೆನೆಂದರೆ, ನನ್ನೆದೆಯ ನೋವಿನ ಬಿಸಿ ಅವುಗಳಿಗೆ ಗರಿ-ಗರಿಯಾಗುವುದನು ಕಲಿಸಬಲ್ಲುದೇ?! ಕಣ್ಣೀರ ಬಿಂದುಗಳು ಅವುಗಳೊಳಗನ್ನು ತೋಯಿಸಬಲ್ಲವೇ?! ಆ ಕಾವು ಸುಡುವುದು ಕಿಸೆಗೆ ತುಂಬಿದ್ದ ಕನಸುಗಳನ್ನಷ್ಟೇ!! ಆ ಕನಸುಗಳನು ತುಂಬಿದ ಕೈಗಳ ಹಿಡಿದ ಮನಸುಗಳಷ್ಟೇ!! ಅರಿವಿನ ಪರಿಧಿಯನು ನಿಲುಕಿ, ಅಸಹಾಯಕತೆಯ ಇನ್ನಷ್ಟು ಕಲಕುವ ನಿಜವೆಂದರೆ, ಆ ನಾಣ್ಯಗಳನು ಕಳೆದುಕೊಂಡರೆ ಕಿಸೆ ಬರಿದಾಗುತ್ತದೆ; ನಂತರ ಕನಸುಗಳೂ ಕಿಸೆಗಿಳಿಯವು!! ಸೋರಿ-ಕರಗಿ ಉಳಿದು  ನಾಣ್ಯಗಳಿಗಂಟಿದ  ಕನ‌ಸುಗಳು ಕಿಸೆಯನು ತುಂಬುತ್ತವೆ!! -ಪಲ್ಲವಿ ಕಬ್ಬಿನಹಿತ್ಲು

ಕಳವಳವ ಕಳೆದುಕೊಂಡಾಗ...

Image
ಕಳೆದುಕೊಳ್ಳುವ ಭಯ ನನಗಿಲ್ಲ, ಕಳೆದುಕೊಳ್ಳುವಂತಹದ್ದೇನೂ ನನ್ನಲ್ಲಿ ಉಳಿದಿಲ್ಲ! ಕೆಸರಿನೊಳಗೇ ಬೆಳೆದಿದ್ದ ಪುಷ್ಪ ನಾನು; ತೊಳೆದಾಗಿದೆ ಇಂದು, ಮತ್ತೆ ಮೆತ್ತಿಕೊಳ್ಳೆನು ನಿನ್ನೆ ನನ್ನ ಬಗಲಲ್ಲಿದ್ದ ರಾಡಿಯ ಭಾರವನ್ನು! ಹಾಗೆಂದು ಅಲ್ಲಿ ಕಳೆದ ಕಾಲವೆಲ್ಲ, ಕೊಳೆಯಾಗಲಿಲ್ಲ ಬದುಕಿಗೆ; ಕಳೆಯಾಗಿ ಬೆಳೆದಿದ್ದುದನೆಲ್ಲ ಕಿತ್ತೆಸೆದಾಗ ಕಳೆದದ್ದೆಲ್ಲಾ ಇಂದಿನ ಹೊಳಪಿನೊಳಗೆ, ‘ಕಳೆ’ಯಾಯಿತು...   ಈಗ ಜೀವನದ ಕೊಳದೊಳಗೆ ಕೆಸರಿಲ್ಲವೆಂದರೆ ಸುಳ್ಳು; ತಳದಲ್ಲಿ ಕುಳಿತುಕೊಂಡಿದೆ ಇನ್ನೂ ಒಂದಷ್ಟು. ಬೇಸರವಿಲ್ಲ ನನಗೆ, ಆಸೆ ಮೊಳೆದುಕೊಂಡಿದೆ ಈಗಷ್ಟೇ, ಇದರೊಳಗಿಂದ ಮತ್ತೊಂದು ತಾವರೆ ಹುಟ್ಟಿಕೊಂಡೀತೆಂದು! ಈ ಆಸೆಗಿಲ್ಲ ಕಳೆದುಕೊಳ್ಳುವ ಅರಿವು, ಏನಿದ್ದರೂ ಬೆಳೆಯುವದರಲ್ಲಿ ಮಾತ್ರ ಇದಕೆ ಒಲವು... ಬದುಕು ಕಳೆದುಕೊಳ್ಳುವ ಕಳವಳವ ಕಳೆದುಕೊಂಡಾಗ, ಮನದೊಳಗೆ ಉಳಿದುಕೊಂಡಿತು, ಉಳಿದು ಬೆಳೆಯುವ ಆಸೆ... -ಪಲ್ಲವಿ ಕಬ್ಬಿನಹಿತ್ಲು                              

ಖಾಲಿಯಾಗೋ ಚಾಳಿ

Image
ಖಾಲಿ ಮನಸಿನೊಳಗೆ ತುಂಬುತ್ತಾ ಹೋದೆ, ಹೆಜ್ಜೆ ಹೆಜ್ಜೆಗೂ ಸಿಕ್ಕ ಪಾಠಗಳನೆಲ್ಲಾ ಕಲಿತಷ್ಟು ಭಯ ಹೆಚ್ಚಾಯಿತು!! ಎಡವಿ ಬೀಳಬಹುದೆಂಬ ಅರಿವಿನ ಇರುವು ಅಲ್ಲಲ್ಲಿ ಹೆಜ್ಜೆ ಮುಂದಿಡುವುದಕ್ಕೂ ಬಿಡಲಿಲ್ಲ; ನಗು ಮುಖದ ಹಿಂದಿರುವ ವ್ಯಂಗ್ಯದ ಸುಳಿವು ರೆಕ್ಕೆ ಬಿಚ್ಚಿ ಹಾರಾಡುವಾಗ ಹೆದರಿಸದಿರಲಿಲ್ಲ; ದಾರಿಯುದ್ದಕ್ಕೂ ಇರುವ  ತಿರುವುಗಳು ಹಲವು, ಅವುಗಳೆಡೆಯಲ್ಲಿ ಅವಿತಿರುವ ನೋವು, ಆಗಬಹುದೆಂಬ ಅವಮಾನಗಳ ಕಾವು, ಎಲ್ಲದಕ್ಕಿಂತ ಹೆಚ್ಚಾಗಿ ನರಳಿಸುವ ಹೊಟ್ಟೆಯ ಹಸಿವು, ಇವೆಲ್ಲದರ ಇರುವಿನ ತಿಳಿವು, ತುಂಬುತ್ತಿತ್ತು ಖಾಲಿ ಮನಸಿನಲಿ... ನಡೆಯುತ್ತಿದ್ದಂತೆ ಮನಸು ಭಾರವಾಗುತ್ತಲೇ ಇತ್ತು; ಎಳೆದೆಳೆದು ಹೆಜ್ಜೆ ಇಟ್ಟೆ ಮುಂದೆ ಕಡೆಗೆ ಸೋತೇ ಹೋದೆ! ಒಂದರೆಕ್ಷಣ ಅಲ್ಲೇ ನಿಂತೆ, ಅಲ್ಲೇ ಉಳಿದೆ; ಭಯದ ಕರಿ ನೆರಳಿನೊಳಗೆ, ಅಲ್ಲೇ ಉಳಿದರೆ ಬೀಳಲಾರೆನೆಂಬ ಬಂಗಾರದ ಸರಳುಗಳೊಳಗೆ, ಅಲ್ಲೇ ಉಳಿದೆ... ಆದರೆ?! ಮತ್ತೆ ಭಯವಾಯಿತು! ನಿಂತಲ್ಲೇ ಕಳೆದುಹೋಗುತ್ತೇನೆಂದು, ನಿಂತಲ್ಲೇ ಕೊಳೆತುಹೋಗುತ್ತೇನೆಂದು, ನಿಂತಲ್ಲೇ ಅಳಿಸಿಹೋಗುತ್ತೇನೆಂದು, ಮತ್ತೆ ಭಯವಾಯಿತು! ಈಗ?! ಹೆಜ್ಜೆ ಹಾಕಲೇಬೇಕಿದೆ ಮುಂದೆ, ಉಳಿದು ಬೆಳೆಯುವುದಕ್ಕೆ, ಬೆಳೆದು ಬೆಳಗುವುದಕ್ಕೆ! ತುಂಬಿಕೊಂಡ ಪಾಠಗಳಲ್ಲಿರಬಹುದೇ ಉತ್ತರ? ತಡಕಾಡಿದೆ ಒಂದೊಂದೇ ಪಾಠಗಳನು, ಭಯವನೋಡಿಸುವ ಪಾಠಗಳು ಚೆಲ್ಲಿ ಹೋಗಿದ್ದವೇನೋ, ಒಂದೂ ಸಿಗಲಿಲ್ಲ ನನ್ನ ಕೈಗೆ... ಎಲ್ಲಾ ನಿರುಪಯುಕ್ತ ಎನಿಸಿತು, ಒಂದೊಂದಾಗಿ ಅಳೆದೆ; ಎಸೆದೆ....

ಹೂ-ನ(ಡಿ)ಗೆ

Image
 ಹೂ-ನ(ಡಿ)ಗೆ ನಡೆದಾಡುತ್ತಿರುತ್ತೇನೆ ಆಗಾಗ ಹೂದೋಟದ ನಡುವೆ, ಹೂಗಳು, ಕಂಡಾಗಲೆಲ್ಲಾ ನಗುತಿರುತ್ತವೆ ನಾನು ನಗದಿದ್ದರೂ ಸಹ!! ನನ್ನ ಕಂಡಾಗ ಆತ್ಮೀಯತೆ ತೋರುವುದೋ; ಅಸಹಾಯಕತೆಯ ಹೊದೆದು ನಿಂತದ್ದಕ್ಕೆ ವ್ಯಂಗ್ಯವಾಡುವುದೋ; ಎಲ್ಲಾ ಸರಿ ಹೋಗುತ್ತದೆಯೆಂದು ಭರವಸೆ ತುಂಬುವುದೋ, ನನಗರಿವಿಲ್ಲ; ಒಂದರ್ಥದಲ್ಲಿ ಅದರ ಪರಿವೆಯೂ ಇಲ್ಲ, ಒಟ್ಟಿನಲ್ಲಿ ನಾನು ನಗದಿದ್ದರೂ ಹೂಗಳು, ಕಂಡಾಗಲೆಲ್ಲಾ ನಗುತಿರುತ್ತವೆ... ರವಿ ಕಿರಣಗಳ ಚುಂಬನಕ್ಕೆ ನಾಚಿ ಪರಿಮಳವಾದ ಕುಸುಮಗಳು, ಅದೇ ಕಿರಣಗಳು ತಾಪವಾದದ್ದನ್ನೂ ಸಹಿಸಿಕೊಳ್ಳುತ್ತವೆ ಸದ್ದಿಲ್ಲದೆ! ಮುಂಜಾವಿನಲ್ಲರಳಿ ದಿನದೊಡನೆ ಮರೆಯಾಗುವ ಕಹಿ ನುಂಗಿ ದುಂಬಿಗಳಿಗೆಂದು ಮಧುವಿನ ಸಿಹಿಯನು ಹಂಚುತ್ತವೆ, ಅದಕ್ಕೇ ಇರಬೇಕು, ನನ್ನ ಚೇತನ ಮುದುಡಿದಂತೆಲ್ಲಾ ನಡೆದಾಡುತ್ತೇನೆ ನಗುವ ಹೂಗಳ ಹೂದೋಟದಲ್ಲಿ, ಅವುಗಳೊಂದಿಗೆ ನಾನು ನಗುವಾಗುವವರೆಗೆ; ಅವುಗಳೂ ನಗುತ್ತಲೇ ಇರುತ್ತವೆ,  ನನಗೆ ನಗುವ ಪಾಠ ಕಲಿಸುವವರೆಗೆ.... ಇದು ಹೂ ನಗೆ ಕಲಿವ ನಡಿಗೆ! -ಪಲ್ಲವಿ ಕಬ್ಬಿನಹಿತ್ಲು

ಮರಣದಂಡನೆ

Image
 ಮರಣದಂಡನೆ (Prof. ಬರಗೂರು ರಾಮಚಂದ್ರಪ್ಪ  ) ಇದು ಬರಗೂರು ರಾಮಚಂದ್ರಪ್ಪರವರು ಬರೆದ ಕಾದಂಬರಿ. ' ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಾದಂಬರಿಯನ್ನು ೨೦೧೪ರಲ್ಲಿ ಮೈಸೂರಿನ  'ಅಭಿರುಚಿ ಪ್ರಕಾಶನ'ದವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಬರಗೂರರ ಹೆಸರು ಅಪರಿಚಿತವಲ್ಲದಿದ್ದರೂ ಅವರ ಬರವಣಿಗೆಯ ಶೈಲಿ ನನಗೆ ಅಪರಿಚಿತವಾಗಿಯೇ ಉಳಿದಿತ್ತು, ನಮ್ಮ ಸುಳ್ಯದ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕದ ಮೇಲೆ  ಅವರ ಹೆಸರು ಕಂಡದ್ದೇ ತಡ ಅದರ ಮುಖಪುಟ, ಶೀರ್ಷಿಕೆಯನ್ನೂ ಸರಿಯಾಗಿ ನೋಡದೆ ಎರಡು ಪುಸ್ತಕಗಳನ್ನು ಎತ್ತಿಕೊಂಡಿದ್ದೆ. ಈ ಪುಸ್ತಕವನ್ನು ಓದಿದ ನಂತರ ಅದರಲ್ಲೇನಾದರು ತಪ್ಪಿದೆ ಎಂದು ನನಗನಿಸದು. ಕತೆಗಾರನೊಬ್ಬ ತನ್ನೂರಿನ ಹುಡುಗನೊಬ್ಬನ ಕತೆಯನ್ನು ನಮ್ಮೆದುರು ತಾನು ಕಂಡ ಹಾಗೆ ತೆರೆದಿಡುತ್ತಾ ಹೋಗುತ್ತಾನೆ. ಕತೆಯ ಮುಖ್ಯ ಪಾತ್ರ ಹುಸೇನನ ಮೂಲಕ ಸಮಾಜದ ಸೂಕ್ಷ್ಮತೆಗಳೆಡೆಗೆ ತೆರೆದುಕೊಳ್ಳುತ್ತಾ ಹೋಗುವುದೇ ಈ ಕಾದಂಬರಿಯ ವೈಶಿಷ್ಟ್ಯ ಎನ್ನಬಹುದು.  ಹುಸೇನ್ ನಗರದ ಜೈಲಿನಲ್ಲಿ ಮರಣದಂಡನೆಗೆ ಗುರಿಯಾದವರನ್ನು ನೇಣುಗಂಬಕ್ಕೇರಿಸುವಾತ(Death Sentence Executor)!! ಆತನಿಗೆ ತನ್ನ ತಂದೆ-ತಂಗಿ, ಊರಿನ ಟೀಚರಮ್ಮ, ಕತೆಗಾರರು ಹಾಗೂ ಊರಿನ ಹಿರಿಯರೇ ಜಗತ್ತು. ಅಲ್ಲಿಂದಾಚೆಗೆ ಹೆಚ್ಚೇನನ್ನೂ ತಲೆಗೆ ಹಚ್ಚಿಕೊಳ್ಳದ  ನಮ್ಮ ಹುಸೇನ್ ಸರ್ವೇ ಜನಾಃ ಸುಖಿನೋಭವಂತು ಅಂತ ತನ್ನಷ್ಟಕ್ಕೆ ತಾನು ಬದುಕುತಿದ್ದವನು. ಅ...

ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು.... (ನೆನಪುಗಳಿವೆ ಹಲವು)

Image
  "ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು" ಎಷ್ಟು ವಾಸ್ತವವಾದ ಸಾಲುಗಳು... ಆ ವಯಸ್ಸಿನಲ್ಲಿ ಭಾವನೆಗಳು, ಗೊಂದಲಗಳು ಬೆಳೆದಂತೆ ಬದಲಾಗುತ್ತಲೇ ಇರುತ್ತವೆ... ಒಂದು ಕ್ಷಣದ ಭಾವ ಇನ್ನೊಂದು ಕ್ಷಣದಲ್ಲಿ ಸುಳ್ಳೆನಿಸುತ್ತದೆ. ಆ ಬೆಳವಣಿಗೆಯ ವಯಸ್ಸೇ ಹಾಗಿರಬೇಕು, ನಾನಂದದ್ದೇ ಸರಿ, ಅದಕ್ಕಿಂತ ಹೊರಗಿನ ಜಗತ್ತೇ ಸುಳ್ಳು ಎಂಬ ಭ್ರಮೆಯೊಳಗಿನ ಬದುಕು! ಹೊತ್ತು ಸರಿದ ಹಾಗೆ ಭ್ರಮೆಯ ಮಂಜು ಕರಗಿ ಅರಿವಿನ ಕಿರಣಗಳು ಕಾಣಿಸತೊಡಗುತ್ತವೆ. ಒಂದಷ್ಟು ವಿಚಾರಗಳು ಬಹಳಷ್ಟು ಪ್ರಭಾವಶಾಲಿಯಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿಯೂ ಸಹ ತನ್ನ ಕೊಡುಗೆಯನ್ನು ನೀಡುತ್ತದೆ. ನಾನು ಹೈಸ್ಕೂಲಿನಲ್ಲಿದ್ದಾಗ ದೇವರು ಇದ್ದಾನೋ-ಇಲ್ಲವೋ ಎಂದು ಚರ್ಚೆಯ ಹೆಸರಲ್ಲಿ ವಾಗ್ವಾದಗಳಾಗುತಿದ್ದದ್ದು ಈಗ ತಮಾಷೆ ಎನಿಸುವುದರಲ್ಲಿ ಅಚ್ಚರಿಯಿಲ್ಲ, ಆಗ ನನ್ನ ವಿಚಾರಗಳನ್ನು ಎಲ್ಲರೂ ಒಪ್ಪಬೇಕೆಂಬ ಮಹದಾಶೆಯ ಎದುರಿಗೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯೇ ನನ್ನನ್ನು ಕಾಡುತ್ತಿರಲಿಲ್ಲ,  ನನಗೆ ಆ ಹೊತ್ತಿಗೆ ಈ ವಿಚಾರದ (ವ್ಯಕ್ತಿಸ್ವಾತಂತ್ರ್ಯದ)  ಬಗ್ಗೆ ತಿಳಿದಿರಲಿಲ್ಲವೆಂಬುದು ಸಹ ನಿಜವೇ. ಇದು ೨೦೧೫ರಲ್ಲಿ ಬರೆದಿದ್ದ ಕವನ,  ನನ್ನ ಈ ಬರವಣಿಗೆ ಬಾಲಿಶ ಎಂದೆನಿಸಿದರೂ ಸರಿಯೇ, ಆ ಹೊತ್ತಿಗೆ ಲೇಖನಿಯ ಅಲಗು ಜಗತ್ತಿನ ವಿಚಾರಗಳನ್ನೆಲ್ಲಾ ಬುಡಮೇಲು ಮಾಡಿಬಿಡುತ್ತದೆ ಎಂಬ ಭಂಢ ಧೈರ್ಯವೂ ಜೊತೆಗಿತ್ತು, ಮನಸಿಗೆ ತೋಚಿದ ವಿಚಾರ, ತೋಚಿದ ರೀತಿಯಲ್ಲಿ ಗೀಚಿದ್ದು.....

ಹೊಸತನದ ಸೋಗಿನಲ್ಲಿ...

Image
ಇನ್ನೇನು ಗೋಡೆಗೆ ನೇತು ಹಾಕಿರುವ ಕ್ಯಾಲೆಂಡರ್ ಬದಲಾಯಿಸುವ ದಿನ ಬಂತು... ಹೊಸ ವರ್ಷ ಎಂಬ ಸೋಗಿನಲ್ಲಿ ಎಲ್ಲರಿಗೆ ಸಿಹಿಯನ್ನು ಬಯಸುವ, ಬದುಕಿನಲ್ಲಿ ಎದುರಾಗುವ ಕಹಿಯನ್ನು ಎದುರಿಸುವ ಶಕ್ತಿ ಇರಲೆಂದು ಹಾರೈಸುವ ಸಂದೇಶಗಳು ರವಾನೆಯಾಗುತ್ತಲಿದೆ, ಕಳೆದ 2020ರಲ್ಲಿ ಕಷ್ಟ-ನಷ್ಟಗಳ ನಡುವೆಯೂ ಜೊತೆಯಾದ ಆತ್ಮೀಯರಿಗೆ ಧನ್ಯವಾದಗಳು, ಬಿರುಕು ಬಿಟ್ಟ ಸಂಬಂಧಗಳ ಸವಿಯನ್ನು ನೆನಪಿಸಿ ಅವರವರ ಪಾಲಿನ ಕ್ಷಮೆ ಯಾಚನೆಯ ಸಂದೇಶಗಳು ಸಹಾ ಮತ್ತೊಮ್ಮೆ ಹರಿದಾಡತೊಡಗಿವೆ. ಮತ್ತೊಮ್ಮೆ ನ್ಯೂ ಈಯರ್ ರೆಸೊಲ್ಯೂಶನ್ (New Year Resolution) ತೆಗೆದುಕೊಂಡು, ಈ ಬಾರಿ ಯಾರು ಏನೆಂದರೂ ನಾನು ಹಾಕಿದ ಗುರಿಯನ್ನು ಮುಟ್ಟಿಯೇ ತೀರುತ್ತೇನೆ ಎಂಬ (ಆರಂಭ!) ಶೂರತ್ವದ ಮಾತುಗಳು ಎದೆಯೊಳಗಿನಿಂದ ಮೊಳಗುತ್ತಿವೆ... ಇವೆಲ್ಲ ಪ್ರತಿ ಹೊಸವರ್ಷದಲ್ಲಿ ಮತ್ತೆ-ಮತ್ತೆ ಮರುಕಳಿಸುವಂತಹವೇ ಹಾಗಾದರೆ ಹೊಸತೇನಿದೆ ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ! ಹಿಂದಿನ ಬಾರಿ ಹೊಸ ವರುಷಕ್ಕೆ ನಾನೇ ಹಾಕಿಟ್ಟುಕೊಂಡ ಬೇಲಿಯನ್ನು ದಾಟಿಕೊಂಡು ಹೊಸ ಮುಖಗಳ ಪರಿಚಯವಾದ ಹಾಗೆಯೇ, ಗೆಳೆತನದ ನಂಟನ್ನು ಬೆಸೆದುಕೊಂಡು ಬಹಳಷ್ಟು ಗೆಳೆಯ-ಗೆಳತಿಯರನ್ನು ಸಂಪಾದಿಸಿಕೊಳ್ಳಬೇಕೆಂದುಕೊಂಡಿದ್ದೆ, ಆದರೇನಾಯಿತು, ಈಗಲೂ ಮೊದಲಿದ್ದ ಗೆಳೆಯ-ಗೆಳತಿಯರನ್ನು ನಾನು ಕಳೆದುಕೊಳ್ಳಲಿಲ್ಲ ಎಂಬ ತೃಪ್ತಿ ಮಾತ್ರ ನನ್ನೊಂದಿಗೆ ಉಳಿದದ್ದು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಸ್ನೇಹವಿದ್ದದ್ದು ಗ್ರಂಥಾಲಯದೊಂದಿಗೆ, ಪುಸ್ತಕಗಳೊಂದಿ...

ಮರು(ರ)ಳು ಪ್ರೇಮಿ

Image
ಕಿನಾರೆಗೆ ಮುತ್ತನಿಡುತ್ತವೆ ಅಲೆಗಳು, ಸೋಲನೊಪ್ಪದೆ ಮತ್ತೆ-ಮತ್ತೆ... ಮರಳನು ಚುಂಬಿಸುವ ಮರುಳಿಗೆ ಮನಸೋಲದಿರಬಹುದೇ ಕಂಗಳು?! ಲೆಕ್ಕವಿರದಷ್ಟು ಬದುಕುಗಳಡಗಿವೆ ಸಾಗರದಲಿ; ಆದರೂ, ಉಸಿರಿಲ್ಲದ ಉಸುಕಿನ ಮೇಲೆ ಅದೆಷ್ಟು ಮೋಹವದಕೆ?! ತಾನಲ್ಲದೆ ಬೇರಾರೂ ಮರಳ ಮೇಲೆ  ಗುರುತುಳಿಸಬಾರದೆಂದು, ಮೂಡಿದ ಗುರುತುಗಳನೆಲ್ಲಾ ಅಳಿಸುವುದನ್ನೂ ಮರೆಯದು ಮರ(ರು)ಳು ಪ್ರೇಮಿ! ಜೋಡಿ ಹೆಜ್ಜೆಗಳ, ಅಲ್ಲಲ್ಲಿ ಬರೆಯುವ ಎದೆಯ ಚಿತ್ತಾರಗಳ ಮೇಲಂತೂ ಇನ್ನಿರದ ಮುನಿಸು; ತನಗಿಲ್ಲದ ಭಾಗ್ಯದ ಮೇಲೆ ಹೊಟ್ಟೆಕಿಚ್ಚಿರಬೇಕು!! ಚಂದಿರನಿರಲು ಬೆಳದಿಂಗಳ ಬೆಳಕಲ್ಲಿ; ಶಶಿಯಿರದಿರಲು ಅವನು ಚೆಲ್ಲುವ ಪ್ರೀತಿಯ ನೆನಪಲ್ಲಿ; ಭೋರ್ಗರೆದು ಮೈಮೇಲೆ ಬಿದ್ದರೂ, ಕಿನಾರೆಯು ಕಿನಾರೆಗೇ* ತಳ್ಳುವುದು ಲಹರಿಗಳನು, ಕಲ್ಲು ಹೃದಯದ ಇನಿಯನಂತೆ!! ಆದರೇನು, ಸಾಗರದ ಅಲೆಗಳಿಗೆ ಮರುಳು ಪ್ರೀತಿ, ಕೊರಳ ತುಂಬಾ ಕರೆ-ಕರೆದು, ಚೂರು-ಚೂರೇ ಮರಳನು ತನ್ನೊಳಗೆ ಸೆಳೆದುಕೊಳ್ಳುತ್ತವೆ, ಎಂದಾದರೊಮ್ಮೆ ಈ ಅಂತರವೇ  ಅಳಿಸಿಹೋಗಬಹುದೆಂಬ ಆಸೆಯಲಿ... [*ಕಿನಾರೆ=ಮೂಲೆ] -ಪಲ್ಲವಿ ಕಬ್ಬಿನಹಿತ್ಲು

(ಅ)ಪರಿಪೂರ್ಣತೆಯ ಸುಖ

Image
 ಬದುಕಿನಲ್ಲಿ ಅರ್ಧವಾಗಿ ಉಳಿಯುವುದೇ ಖುಷಿಯಲ್ಲವೆ? ಅರೆರೆ, ಇದೇನು ಹುಚ್ಚು ಕಲ್ಪನೆ ಎಂದೆನಿಸಿದರೆ ತಪ್ಪಿಲ್ಲ... ತಪ್ಪು-ಒಪ್ಪುಗಳ ನಡುವೆಯೇ ಬದುಕಿನ ಸೊಗಡು ಅಡಗಿರುವುದು, ಆದರೆ, ಪರಿಪೂರ್ಣತೆಯಲ್ಲಿ ತಪ್ಪುಗಳಿಗೆ ಎಡೆಯಿಲ್ಲ, ಅಲ್ಲಿ ಎಲ್ಲವೂ, ಎಲ್ಲರೂ ಸರಿಯೇ; ಸಂಪೂರ್ಣವೇ! ಆದರೆ ಅರ್ಧವಾಗಿ, ಅಪರಿಪೂರ್ಣ, ಅಪಕ್ವವಾಗಿ ಉಳಿಯುವುದರಲ್ಲಿ ಇವೆಲ್ಲಕ್ಕೂ ಅವಕಾಶವಿದೆ... ಅನುಭವಗಳ ಪಾಠಕ್ಕೆ ಬೆಲೆಯಿದೆ, ಅಲ್ಲಲ್ಲಿ ಎಡೆವಿದರೂ ನಡೆಯುವ ನಿಲುವಿದೆ... ಪರಿಪೂರ್ಣರಾಗುವ ಕನಸು ಕಾಣುವುದಕ್ಕೂ ಅಪೂರ್ಣರಾಗುವ ಅಗತ್ಯತೆಯಿದೆ. ಸೋಲಿನಿಂದ ಕಲಿತು ಗೆದ್ದವನಿಗೆ ಎಂದಿದ್ದರೂ ಸೋಲಿನ ಬಳಿಕದ ಹಾದಿಯ ಮೇಲೆ ಅಪಾರ ಪ್ರೀತಿ, ಬಾಂಧವ್ಯಗಳಿರುತ್ತದೆ. ಆ ನಂಟು ಗೆಲುವಿನ ಸವಿಗಿಂತಲೂ ದಟ್ಟವಾಗಿರುತ್ತದೆ. ಹಾಗೆಯೇ ಅರ್ಧ ತಿಳಿದುಕೊಂಡು ಪೂರ್ತಿಯನ್ನು ಹುಡುಕುವಾಗಿನ ಕುತೂಹಲ, ಉತ್ಸಾಹ, ಅಲ್ಲಡಗಿರುವ ಗಾಬರಿ, ಆತುರತೆ-ಕಾತುರತೆ ಎಲ್ಲವೂ ಚಂದ... ಅದು ಗೆಲುವಿ(ಅರಿವಿ)ನ ಕ್ಷಣದಲ್ಲೊಮ್ಮೆ ಕಾಡಿ ಹೋದಾಗ ಎದೆ ತುಂಬಿ ಬಂದು ಕಣ್ಣು ತುಂಬಿಕೊಳ್ಳುತ್ತದೆ.  ಇದೇಕೆ ಹೀಗೆ? ಎಂದರೆ ಇರುವುದೆಲ್ಲವನು ಬಿಟ್ಟು ಇಲ್ಲದುದರೆಡೆಗೆ ತುಡಿವ ಮನಕ್ಕೇನನ್ನೋಣ! ಹುಡುಕಿದ್ದು ಸಿಕ್ಕಿತು ಎನ್ನುವಾಗ ಇನ್ನೊಂದು ಹುಡುಕಾಟಕ್ಕೆ ವಿಷಯವನ್ನು ಮನಸ್ಸು ಹುಡುಕಿಕೊಳ್ಳುತ್ತದೆ, ಅದಕ್ಕೂ ಪೂರ್ಣವಾಗುವುದಕ್ಕೆ ಇಷ್ಟವಿಲ್ಲ!  ಅಜ್ಞಾನ ದ ಖಾಲಿತನದಲ್ಲಿ ಅದು ವಿಹರಿಸುವ ಜಾಗವನ್ನು ಹುಡು...

(ವಿ)ಚಿತ್ರ ಹನಿಗಳು-3

Image
  ----------------------1------------------------- ಎಲ್ಲವನ್ನೂ ತೊರೆದು ಸಾಧಕನಾಗಬೇಕು ಎಂದಾತನಿಗೆ ಅಚ್ಚರಿ ಹುಟ್ಟಿಸಿದ್ದು; ಬದುಕಿನ ಸಂತೆಯಿಂದ ಓಡಿ ಹೋಗುವುದು, ಸಾಧನೆಯೇ? ಎಂಬ ಪ್ರಶ್ನೆ!! ----------------------2------------------------- ನನ್ನಿರದಿರುವಿಕೆ ನಿನಗೊಮ್ಮೆ ಕಾಡಿದರೂ ಸಾಕು, ಗೆಳತಿ, ಈ ಕಾಯುವಿಕೆ ಸಾರ್ಥಕ! ----------------------3------------------------- ಆಕಾಶಕೆ ಏಣಿ ಹಾಕುವ, ಆಸೆ ಹೊತ್ತ ಮನಸಿಗೇನು ಗೊತ್ತು? ವಾಸ್ತವವಾಗಿ ಆಕಾಶ ಖಾಲಿ ಎಂದು!! ----------------------4------------------------- ಅಳೆದು ಕೊಡುವಂತಹದ್ದೇನೂ, ನನ್ನಲಿಲ್ಲ ಗೆಳತಿ, ಇದ್ದೊಂದು ಹೃದಯದ ಮಹಲಿಗೂ, ಈಗ ನೀನೇ ಒಡತಿ!! ----------------------5------------------------- ಚೆಂದುಟಿಗಳ ಮರೆಯಲ್ಲಿ, ನಗುವನು ಅಡಗಿಸುವುದೇಕೆ ಗೆಳತಿ?! ನಕ್ಕುಬಿಡು ಒಮ್ಮೆ; ಬಿದ್ದ ಮುತ್ತುಗಳನೆತ್ತಿಕೊಂಡು, ಸಿರಿವಂತನಾಗುತ್ತೇನೆ ನಾನು! -ಪಲ್ಲವಿ ಕಬ್ಬಿನಹಿತ್ಲು

ನೆನಪುಗಳ ದಿಬ್ಬಣ

Image
ನೆನಪುಗಳಿಗೆ ನೆನಪುಗಳು ನೆನಪಾದೀತೆ? ಅರ್ಥವಿಲ್ಲದ ಪ್ರಶ್ನೆ! ಈ ಹುಚ್ಚು ಯೋಚನೆಯ ಕೊಡುಗೆ ನನ್ನಲ್ಲಿ ಉಳಿದಿರುವ ಖಾಲಿ ಹೊತ್ತಿನದ್ದು, ಕೆಲಸವಿಲ್ಲದ ಖಾಲಿ ತಲೆಯದ್ದು... ಕೈಗೆ, ಮನಸಿಗೆ, ಬುದ್ಢಿಗೆ ಕೆಲಸವಿಲ್ಲದಿದ್ದರೆ ಕುಳಿತಲ್ಲಿಯೇ ನೂರು ಯೋಚನೆಗಳು ಕಾಡುತ್ತವೆ, ಅದರಲ್ಲಿ ಶೇಕಡ ತೊಂಬತ್ತರಷ್ಟು ನೆನಪುಗಳದ್ದೇ ಸಾಮ್ರಾಜ್ಯ. ಅಲ್ಲಿಯವರೆಗೆ ಕಾಣದ ಹಾಗೆ ಅವಿತು ಕುಳಿತಿದ್ದ ಈ ನೆನಪುಗಳು ಅದೆಲ್ಲಿಂದ ಸಮಯ ಸಾಧಿಸಿಕೊಂಡು ಕಣ್ಣೆದುರು ಮೆಲ್ಲನೆ ಜಗತ್ತೊಂದನ್ನು ತೆರೆಯುತ್ತದೆಯೋ ಅದು ಅಚ್ಚರಿಯಲ್ಲವೇ!! ಅದೆಲ್ಲೋ ಓದಿದ ನೆನಪು, ಬದುಕಲ್ಲಿ ನಡೆದದ್ದೆಲ್ಲವೂ ನೆನಪಿದ್ದರೆ ಒಳ್ಳೆಯದೋ ಕೆಟ್ಟದೋ ಎಂಬುವುದಕ್ಕೆ ನೀಡಿದ್ದ ಪ್ರತ್ಯುತ್ತರ ಹೆಚ್ಚು-ಕಡಿಮೆ ಹೀಗಿತ್ತು: ನೆನಪುಗಳು ಮತ್ತೆ-ಮತ್ತೆ ಕಾಡುತ್ತವೆಂದರೆ ನಾವಿನ್ನೂ ಅದೇ ಹೊತ್ತಲ್ಲಿ ಉಳಿದುಕೊಂಡಿದ್ದೇವೆ, ಅಲ್ಲಿಂದ ಮುಂದೆ ಹೆಜ್ಜೆ ಇಡಲೇ ಇಲ್ಲ ಎಂದು!! ಸತ್ತ 'ಹೊತ್ತಿನಲ್ಲೇ' ಉಳಿದುಕೊಳ್ಳುವುದು ಸರಿಯೇನು?! ಬದುಕು ಅಲ್ಲೇ ಸಿಲುಕಿಕೊಂಡಾಗ ಮುಂದೆ ಹೆಜ್ಜೆ ಹಾಕುವುದು ಕಷ್ಟವಲ್ಲವೇ?  ಹಾಗೆಂದು ನೆನಪುಗಳೆಲ್ಲ ಅಳಿಸಿಹೋಗುತ್ತದೆಂದರೆ, ಈ ಹೊತ್ತಿನ ನಗು, ಅಳು, ನಮ್ಮವರೊಂದಿಗೆ ಕುಳಿತು ಕಳೆಯುವ ಕ್ಷಣ, ಒಮ್ಮೆ ಕಾಡಿ ಮರೆಯಾಗುವ ಅವಮಾನ, ಅಭಿಮಾನ, ಕೋಪ-ತಾಪಗಳಿಗೆ ಅರ್ಥವೇ ಉಳಿಯುವುದಿಲ್ಲ. ಈ ಮಾನವೀಯ ಸಂಬಂಧಗಳು, ಪರಿವಾರ, ಗೆಳೆತನ, ಬಾಂಧವ್ಯ, ಪ್ರೀತಿ, ಪ್ರೇಮ ಯಾವುದಕ್ಕೂ ಅಸ್ತಿತ್ವವೇ ಇಲ್...